ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಭಾರಿ ದುರಂತ ಸಂಭವಿಸಿದೆ. ಬೃಹತ್ ಕಲ್ಲು ಬಂಡೆಯೊಂದು ಕುಸಿದುಬಿದ್ದು ಏಳು ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಕಾವೇರಿ ಕ್ರಷರ್ ಮಾಲೀಕತ್ವಕ್ಕೆ ಸೇರಿದ ಕ್ವಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ತಾವರೆಕೆರೆಯ ಮಾದಪಟ್ಟಣದ ಹುಲುವೇನಹಳ್ಳಿ ಗ್ರಾಮದ ವ್ಯಾಪ್ತಿಯ ಸುಮಾರು 3.20 ಎಕರೆ ಪ್ರದೇಶದಲ್ಲಿ ಈ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. 30 ವರ್ಷಕ್ಕೆ ಕ್ವಾರಿಯನ್ನು ಗುತ್ತಿಗೆ ಆಧಾರದಲ್ಲಿ ಕಲ್ಲುಗಣಿಗಾರಿಕೆ ಲೈಸೆನ್ಸ್ ಪಡೆದು ಗಣಿಗಾರಿಕೆ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.
ಕ್ವಾರಿಯಲ್ಲಿ ಬಂಡೆ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಬಂಡೆ ಕುಸಿದು ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಜೆಸಿಬಿ ಮೂಲಕ ಮೃತದೇಹಗಳನ್ನು ಒಂದೊಂದಾಗಿ ಮೇಲಕ್ಕೆ ಎತ್ತಲಾಗುತ್ತಿದೆ. ಬಂಡೆಯ ಮೇಲಿನಿಂದ ಬಿದ್ದ ಏಳು ಕಾರ್ಮಿಕರು ಸ್ಥಳದಲ್ಲಿಯೇ ಉಸಿರುಚೆಲ್ಲಿದ್ದು, ಬಂಡೆಯ ಅಡಿಗೂ ಏಳು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ನಾಲ್ವರ ಮೃತದೇಹ ಹೊರ ತೆಗೆಯಲಾಗಿದೆ ಎಂದು ವರದಿಯಾಗಿದೆ.
ಕಾವೇರಿ ಕಂಪನಿಗೆ ಸೇರಿದ ಕ್ರಶರ್ನಲ್ಲಿ ಈ ದುರಂತ ಸಂಭವಿಸಿದೆ. ಕಾರ್ಮಿಕರು ಹಿಟಾಚಿಯಲ್ಲಿ ಕೆಲಸ ಮಾಡುವ ವೇಳೆ ಬಂಡೆ ಕುಸಿದುಬಿದ್ದಿದೆ. ಈ ವೇಳೆ ಕಾರ್ಮಿಕರೂ ಕೂಡ ಕೆಳಕ್ಕೆ ಬಿದ್ದಿದ್ದಾರೆ. ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

