ರಾಜಕೀಯ ಸುದ್ದಿ

ಬಿಜೆಪಿ ಬೌದ್ಧಿಕ ದಿವಾಳಿತನದ ಪ್ರತೀಕ ಛಲವಾದಿ ನಾರಾಯಣಸ್ವಾಮಿ ನಡವಳಿಕೆ: ರಮೇಶ್ ಬಾಬು

Share It

ಬೆಂಗಳೂರು: ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಬೌದ್ಧಿಕವಾಗಿ ದಿವಾಳಿಯಾಗಿದೆ ಎಂಬುದು ಛಲವಾದಿ ನಾರಾಯಣಸ್ವಾಮಿ ಅವರು, ಪ್ರಿಯಾಂಕ ಖರ್ಗೆ ರವರ ರಾಜೀನಾಮೆ ಕೇಳುತ್ತಿರುವ ರೀತಿಯಲ್ಲಿ ತಿಳಿಯುತ್ತದೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಆರೋಪಿಸಿದ್ದಾರೆ.

ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ, ಶ್ರೀ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಅವರನ್ನು ತೇಜೋವದೆ ಮಾಡುವ ಕಾರಣಕ್ಕಾಗಿ ಬಿಜೆಪಿ ಹಲವು ನಾಯಕರಿಗೆ ಬಹುಮಾನ ನೀಡುತ್ತಿದೆ. ಅಂತಹ ಬಳುವಳಿಗಳಲ್ಲಿ ವಿಧಾನ ಪರಿಷತ್ತಿನ ಸ್ಥಾನ ಗಳಿಸಿದ ಛಲವಾದಿ ನಾರಾಯಣಸ್ವಾಮಿ, ಮತ್ತೊಮ್ಮೆ ಬಿಜೆಪಿ ಲಾಟರಿ ಯೋಜನೆಯಲ್ಲಿ ವಿಪಕ್ಷ ನಾಯಕ ಸ್ಥಾನ ಪಡೆದಿದ್ದಾರೆ ಎಂದು ಕುಟುಕಿದ್ದಾರೆ.

ಸಂಘಪರಿವಾರದ ಅಣತಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಮುಂದೆ ಸ್ವಾಭಿಮಾನ ಬಿಟ್ಟು ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿ ಚಡ್ಡಿ ಹೊತ್ತು ಹೋರಾಟ ಮಾಡಿದ ನಾರಾಯಣಸ್ವಾಮಿ ಅವರಿಗೆ ವಿಧಾನ ಪರಿಷತ್ತಿನ ಸ್ಥಾನ ಕರುಣಿಸಲಾಗಿತ್ತು. ಈಗ ಖರ್ಗೆರವರ ಕುಟುಂಬವನ್ನು ವ್ಯಕ್ತಿಗತ ನಿಂದನೆ ಮತ್ತು ಟೀಕೆ ಮಾಡುವ ಕಾರಣಕ್ಕಾಗಿ ವಿಪಕ್ಷದ ನಾಯಕ ಸ್ಥಾನ ಕರುಣಿಸಿದೆ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಪೋಸ್ಕೋ ಪ್ರಕರಣ ಎದುರಿಸುತ್ತಿದ್ದಾರೆ. ಅನೇಕ ನಾಯಕರು ಸೆಕ್ಸ್ ಪ್ರಕರಣಗಳಲ್ಲಿ ನ್ಯಾಯಾಲಯದ ತಡೆಯಾಜ್ಞೆ ಪಡೆದುಕೊಂಡು ಓಡಾಡುತ್ತಿದ್ದಾರೆ. ಪರಿಶಿಷ್ಟ ಜಾತಿಗಳ ಜಾತಿನಿಂದನೆ ಆರೋಪದ ಮೇಲೆ ಜಾಮೀನು ಪಡೆದು ಆಚೆ ಇರುತ್ತಾರೆ. ಇಂತಹ ನಾಯಕರ ರಾಜೀನಾಮೆ ಕೇಳಲು ನೈತಿಕ ಶಕ್ತಿ ಇಟ್ಟುಕೊಳ್ಳದ ಛಲವಾದಿ ಅವರು, ಕಾಂಗ್ರೆಸ್ ಪಕ್ಷಕ್ಕೆ ಪಾಠ ಹೇಳಲು ಬಂದಿರುವುದು ಅವರ ದಿವಾಳಿತನದ ಪರಮಾವಧಿಯಾಗಿರುತ್ತದೆ ಎಂದಿದ್ದಾರೆ.


Share It

You cannot copy content of this page