ಬೆಂಗಳೂರು : ವಾಟ್ಸಾಪ್ ಮೂಲಕ ಪೊಲೀಸರು ನೋಟಿಸ್ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಮೂಲಕ ತಮಿಳುನಾಡಿನ ಪವನ್ ಕುಮಾರ್ ಎಂಬಾತನಿಗೆ ನೀಡಿದ್ದ ವಾಟ್ಸಾಪ್ ನೋಟಿಸ್ ರದ್ದುಪಡಿಸಿ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರ ಪೀಠ ಶುಕ್ರವಾರ ಆದೇಶ ಹೊರಡಿಸಿದೆ. ಇಂತಹ ಅಭ್ಯಾಸವು ಕಾನೂನಿನಲ್ಲಿ ಅನುಮತಿಸಲಾಗುವುದಿಲ್ಲ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ನೋಟಿಸ್ ನೀಡುವುದು ಶಾಸನಬದ್ಧ ಅವಶ್ಯಕತೆಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆಡುಗೋಡಿ ಪೊಲೀಸರು ಬಿಎನ್ಎಸ್ಎಸ್, 2023 ರ ಕಲಂ 35 (3) ರ ಅಡಿಯಲ್ಲಿ ನೀಡಿದ ನೋಟಿಸ್ನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡಿನ ಪವನ್ ಕುಮಾರ್ ಎಂಬಾತನಿಗೆ ಆಡುಗೋಡಿ ಪೊಲೀಸರು ವಾಟ್ಸಾಪ್ ಮೂಲಕ ಐಟಿ ಕಾಯ್ದೆ ಸೆ.66(C), 66(D)ರಡಿ ನೋಟಿಸ್ ನೀಡಿದ್ದರು. ಆದರೆ ವಾಟ್ಸಾಪ್ ಮೂಲಕ ಪೊಲೀಸರು ನೋಟಿಸ್ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಅರ್ಜಿದಾರರ ಪರ ವಕೀಲ ಜ್ಞಾನೇಶ ಎನ್ಐ ವಾದ ಮಂಡಿಸಿದ್ದು, ಈ ನೋಟಿಸ್ ಕಾನೂನು ನಿಬಂಧನೆಗಳಿಗೆ ಅನುಗುಣವಾಗಿಲ್ಲ. ಹಾಗಾಗಿ ಅಮಾನ್ಯವಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯ ಪರವಾಗಿ ಹೆಚ್ಚುವರಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ (ಎಎಸ್ಪಿಪಿ) ಶ್ರೀಮತಿ ರಶ್ಮಿ ಜಾಧವ್ ವಾದ ಮಂಡಿಸಿದ್ದು, ಕಾನೂನು ಜಾರಿಯಲ್ಲಿ ದಕ್ಷತೆಗಾಗಿ ವಾಟ್ಸಾಪ್ ಸೇರಿದಂತೆ ಡಿಜಿಟಲ್ ಸಂವಹನ ವಿಧಾನಗಳನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ವಾದ ಪ್ರತಿವಾದಗಳನ್ನು ಆಲಿಸಿದ: ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರ ಪೀಠ ವಾಟ್ಸಾಪ್ ಮೂಲಕ ಪೊಲೀಸರು ನೋಟಿಸ್ ನೀಡುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದ್ದಾರೆ.
ಇನ್ನು ಇತ್ತೀಚೆಗೆ ಸತೇಂದರ್ ಕುಮಾರ್ ಆಂಟಿಲ್ ಕೇಸ್ನಲ್ಲಿ ಕೂಡ ವಾಟ್ಸಾಪ್ ಮೂಲಕ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಸುಪ್ರೀಂಕೋರ್ಟ್ ಸಿಆರ್ಪಿಸಿ, ಬಿಎನ್ಎಸ್ಎಸ್ ಕಾಯ್ದೆಯಲ್ಲಿ ಸೂಚಿಸಿರುವಂತೆ ನೋಟಿಸ್ ನೀಡಬೇಕು ಸೂಚನೆ ನೀಡಿತ್ತು.