ಸಿಎಜಿ ವರದಿ ಮಂಡಿಸುವಾಗ ಕಿರಿಕ್: ವಿ.ಪಕ್ಷ ನಾಯಕಿ ಅತಿಶಿ ಸೇರಿ 12 ಎಎಪಿ ಶಾಸಕರು ಸಸ್ಪೆಂಡ್!

Share It

ನವದೆಹಲಿ : ದೆಹಲಿ ವಿಧಾನಸಭೆ ಕಲಾಪದಲ್ಲಿ ರದ್ದುಗೊಂಡಿರುವ ಮದ್ಯ ನೀತಿಯ ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ವರದಿ ಮಂಡಿಸುವಾಗ ನಡೆದ ಕೋಲಾಹಲದಿಂದಾಗಿ ಮಾಜಿ ಮುಖ್ಯಮಂತ್ರಿ-ವಿ.ಪಕ್ಷದ ನಾಯಕಿ ಅತಿಶಿ ಮರ್ಲೆನಾ ಸೇರಿದಂತೆ ಕನಿಷ್ಠ 12 ಎಎಪಿ ಶಾಸಕರನ್ನು ವಿಧಾನಸಭೆ ಅಧಿವೇಶನದಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

ದಿನದ ಅಧಿವೇಶನ ಆರಂಭವಾಗುತ್ತಿದ್ದಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಷೇನಾ ಸದನವನ್ನು ಉದ್ದೇಶಿಸಿ ಮಾತನಾಡಿದರು. ಆದಾಗ್ಯೂ, ಅವರ ಭಾಷಣಕ್ಕೆ ಎಎಪಿ ಶಾಸಕರು ಅಡ್ಡಿಪಡಿಸಿದರು. ಏಕೆಂದರೆ ಅವರು ಬಿಜೆಪಿ ಸರ್ಕಾರದ ವಿರುದ್ಧ ಜೋರಾಗಿ ಘೋಷಣೆಗಳನ್ನು ಮಾಡಿದ್ದರು.

ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಶಾಸಕರಿಗೆ ಶಾಂತವಾಗಿರಲು ಹಲವು ಬಾರಿ ಮನವಿ ಮಾಡಿದರು, ಆದರೆ ಅವರು ಲೆಫ್ಟಿನೆಂಟ್ ಗವರ್ನರ್ ಭಾಷಣಕ್ಕೆ ಅಡ್ಡಿಪಡಿಸಿದರು. ಇದರಿಂದ ಸ್ಪೀಕರ್ ಅವರು ಶಾಸಕರನ್ನು ದಿನದ ಮಟ್ಟಿಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದರು.

ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರಿಗೆ ಅವಮಾನ ಮಾಡಿದ ವಿಷಯದ ಕುರಿತು ಎಎಪಿ ಶಾಸಕರು ಗದ್ದಲ ಸೃಷ್ಟಿಸಿದ ನಂತರ ಸ್ಪೀಕರ್ ಗುಪ್ತಾ ಅವರನ್ನು ಅಮಾನತುಗೊಳಿಸಿದರು. ಅಮಾನತುಗೊಂಡ ಶಾಸಕರನ್ನು ಸದನದ ಹೊರಗೆ ಕರೆದೊಯ್ಯಲಾಯಿತು. ಮಾರ್ಷಲ್‌ಗಳು ಅತಿಶಿ, ಗೋಪಾಲ್ ರೈ, ಸಂಜೀವ್ ಝಾ, ವಿಶೇಷ ರವಿ, ಅನಿಲ್ ಝಾ ಮತ್ತು ಜರ್ನ್ಸೆಲ್ ಸಿಂಗ್ ಅವರನ್ನು ಸದನದ ಹೊರಗೆ ಕರೆದೊಯ್ದರು.

ಶಾಸಕರನ್ನು ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಶಾಸಕರು ವಿಧಾನಸೌಧ ಆವರಣದಲ್ಲಿ ಧರಣಿ ನಡೆಸುತ್ತಿದ್ದಂತೆ ಅತಿಶಿ ಅವರು, ಮುಖ್ಯಮಂತ್ರಿ ಕಚೇರಿಯಲ್ಲಿದ್ದ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸುವ ಮೂಲಕ ಬಿಜೆಪಿಯವರು ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಬಿಜೆಪಿ ತನ್ನ ನಿಜಬಣ್ಣವನ್ನು ತೋರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾಸಾಹೇಬ್ ಅವರನ್ನು ಬದಲಾಯಿಸಬಹುದು ಎಂದು ಪಕ್ಷವು ನಂಬುತ್ತದೆಯೇ? ಎಂದು ಅವರು ಪ್ರಶ್ನೆ ಮಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಕುವವರೆಗೂ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ವಿರೋಧ ಪಕ್ಷದ ನಾಯಕಿ ಅತಿಶಿ ಮರ್ಲೆನಾ ತಿಳಿಸಿದ್ದಾರೆ.

ಅಮಾನತುಗೊಂಡ ಎಎಪಿ ಶಾಸಕರು ಬಾಬಾ ಸಾಹೇಬ್ ಕಾ ಯೇ ಆಪ್ಲಾನ್ ನಹೀನ್ ಸಾಹೇಗಾ ಹಿಂದೂಸ್ತಾನ್ (ಬಾಬಾಸಾಹೇಬ್‌ಗೆ ಮಾಡಿದ ಈ ಅವಮಾನವನ್ನು ಭಾರತ ಸಹಿಸುವುದಿಲ್ಲ) ಎಂದು ಘೋಷಣೆ ಕೂಗಿದರು.

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿಯ ಹಿಂದಿನ ಎಎಪಿ ಆಡಳಿತದ ಹಣಕಾಸು ಆಕ್ರಮಗಳ ಮೇಲೆ ಕೇಂದ್ರೀಕರಿಸುವ 14 ಬಾಕಿ ಉಳಿದಿರುವ ಸಿಎಜಿ ವರದಿಗಳಲ್ಲಿ, ಬಿಜೆಪಿ ಸರ್ಕಾರವು ಈಗ ರದ್ದಾದ ಮದ್ಯ ನೀತಿಯ ಬಗ್ಗೆ ಒಂದನ್ನು ಮಂಡಿಸಲಿದೆ.

ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಎಲ್.ಜಿ. ಸಸ್ಸೇನಾ, ಸಿಎಜಿ ವರದಿಯನ್ನು ಮಂಡಿಸುವ ಸರ್ಕಾರದ ಕಾರ್ಯಸೂಚಿಯನ್ನು ಪ್ರಸ್ತಾಪಿಸುತ್ತಾ, ಸರ್ಕಾರ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ ಸಿಎಜಿ ವರದಿಗಳನ್ನು ಮಂಡಿಸಲು ನಿರ್ಧರಿಸಿದೆ. ಇದು ಹಿಂದಿನ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯಲಿದೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಮುಕ್ತ ಆಡಳಿತ, ಮಹಿಳಾ ಸಬಲೀಕರಣ, ಸ್ವಚ್ಛ ದೆಹಲಿ, ಯಮುನಾ ನದಿಯ ಪುನರುಜ್ಜೀವನ, ಶುದ್ಧ ಕುಡಿಯುವ ನೀರು ಮುಂಬರುವ ತಿಂಗಳುಗಳಲ್ಲಿ ಸರ್ಕಾರದ ಗಮನದ ಕ್ಷೇತ್ರಗಳಾಗಿವೆ ಎಂದು ಹೇಳಿದ್ದಾರೆ.


Share It

You May Have Missed

You cannot copy content of this page