ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮುಂದಿನ ಕುಲಪತಿಯಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರಾಧ್ಯಾಪಕರನ್ನು ಆಯ್ಕೆ ಮಾಡಬೇಕೆಂದು ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಂಘ ಒತ್ತಾಯಿಸಿದೆ.
ಬೆಂಗಳೂರು ವಿವಿಯ ಬೋಧಕ ಹಾಗೂ ಬೋಧಕೇತರ ಸಂಘವು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಪತ್ರ ಬರೆದಿದ್ದು, ಸರಕಾರವು ಬೆಂಗಳೂರು ವಿವಿಗೆ ಕಳೆದ 62 ವರ್ಷಗಳಲ್ಲಿ ಒಟ್ಟು 19 ಪೂರ್ಣಕಾಲಿಕ ಕುಲಪತಿಗಳನ್ನು ನೇಮಕ ಮಾಡಿದೆ. ಈ 19 ಪೂರ್ಣಕಾಲಿಕ ಕುಲಪತಿಗಳಲ್ಲಿ 7 ಜನ ಬ್ರಾಹ್ಮಣ ಸಮುದಾಯಕ್ಕೆ, 5 ಜನ ಒಕ್ಕಲಿಗ ಸಮುದಾಯಕ್ಕೆ 3 ಜನ ಲಿಂಗಾಯತ ಸಮುದಾಯಕ್ಕೆ 3 ಜನ ಹಿಂದುಳಿದ ವರ್ಗಗಳಿಗೆ ಮತ್ತು ಒಬ್ಬರು ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಒಬ್ಬ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಲಪತಿಯನ್ನು ನೇಮಕ ಮಾಡಿರುವುದಿಲ್ಲ.
ಪ್ರಮುಖವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಮುಂದಿನ ಕುಲಪತಿಯಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಹ ಪ್ರಾಧ್ಯಾಪಕರನ್ನು ಮಾತ್ರ ಆಯ್ಕೆ ಮಾಡಬೇಕು ಎಂದು ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಂಘವು ಒತ್ತಾಯಿಸಿದೆ.
ಕೋಟ್:
ಬೆಂಗಳೂರು ವಿವಿಯ ಇತಿಹಾಸದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಲಪತಿಗಳನ್ನು ಆಯ್ಕೆ ಮಾಡದಿರುವುದು ಸಾಮಾಜಿಕ ನ್ಯಾಯಕ್ಕೆ ಅಪಮಾನವಾಗಿದ್ದು, ಪ್ರಸ್ತುತ ದಿನದಲ್ಲಿ ಪರಿಶಿಷ್ಟರ ಸಮುದಾಯದ ಅರ್ಹ ಪ್ರಾಧ್ಯಾಪಕರನ್ನು ಆಯ್ಕೆ ಮಾಡಬೇಕೆಂದು ಗೌರವಾನ್ವಿತರಾದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಹಾಗೂ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿವೆ.
- ಪ್ರೊ. ಜಿ. ಕೃಷ್ಣಮೂರ್ತಿ, ಅಧ್ಯಕ್ಷರು, ಬೆಂಗಳೂರು ವಿವಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಶಿಕ್ಷಕರ ಸಂಘ
ಬಾಕ್ಸ್:
ಬೆಂಗಳೂರು ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಂಘಗಳ ಕಾರ್ಯಕಾರಿ ಸಮಿತಿಯ ಚರ್ಚೆಯಲ್ಲಿ 1964ರಲ್ಲಿ ಪ್ರಾರಂಭವಾದ ದಿನದಿಂದ ಪ್ರಸ್ತುತ ವರೆಗೂ ಕಳೆದ 62 ವರ್ಷಗಳಲ್ಲಿ ಸರ್ಕಾರವು ಒಟ್ಟು 19 ಪೂರ್ಣಕಾಲಿಕ ಕುಲಪತಿಗಳನ್ನು ನೇಮಕ ಮಾಡಿದೆ. ಈ 19 ಪೂರ್ಣಕಾಲಿಕ ಕುಲಪತಿಗಳಲ್ಲಿ 7 ಜನ ಬ್ರಾಹ್ಮಣ ಸಮುದಾಯಕ್ಕೆ, 5 ಜನ ಒಕ್ಕಲಿಗ ಸಮುದಾಯಕ್ಕೆ, 3 ಜನ ಲಿಂಗಾಯತ ಸಮುದಾಯಕ್ಕೆ, 3 ಜನ ಹಿಂದುಳಿದ ವರ್ಗಗಳಿಗೆ ಮತ್ತು ಒಬ್ಬರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾರೆ. ರಾಜ್ಯ ಸರ್ಕಾರವು ಅತಿ ತುರ್ತಾಗಿ ಪರಿಶಿಷ್ಟ ಸಮುದಾಯದ ಅರ್ಹ ಪ್ರತಿಭೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪರಿಗಣಿಸಿ ಕುಲಪತಿಗಳ ನೇಮಕಾತಿ ಮಾಡುವ ಜವಾಬ್ದಾರಿ ಸರ್ಕಾರದ ಮತ್ತು ಕುಲಾಧಿಪತಿಗಳ ನಿರ್ಧಾರ ಮಾಡಬೇಕಿದೆ.

