ಬೆಂಗಳೂರು: ಜೀವನ್ ಬಿಮಾನಗರದಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ, ಅಪಘಾತದಲ್ಲಿ ಬಾಲಕನ ಸಾವಿಗೆ ಕಾರಣವಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಕಾರು ಚಲಾಯಿಸುತ್ತಿದ್ದದ್ದು, ೧೫ ವರ್ಷದ ಬಾಲಕ ಎಂದು ಹೇಳಲಾಗಿದ್ದು, ಕಾರನ್ನು ವಾಶ್ ಮಾಡುತ್ತಿದ್ದ ಬಾಲಕ ಏಕಾಏಕಿ ಬೀದಿಯಲ್ಲಿ ನುಗ್ಗಿಸಿದ್ದಾನೆ. ಈ ವೇಳೆ ಅನೇಕರಿಗೆ ಗಾಯಗಳಾಗಿದ್ದು, ರಸ್ತೆಯಲ್ಲಿ ಆಟವಾಡುತ್ತಿದ್ದ ಆರವ್ ಎಂಬ ಐದು ವರ್ಷದ ಬಾಲಕ ಮೇಲೆ ಹತ್ತಿ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಆರವ್ ಜತೆಯಲ್ಲಿ ಆಟವಾಡುತ್ತಿದ್ದ ಮತ್ತೊಂದು ಮಗುವಿಗೆ ಗಂಭೀರವಾಗಿ ಗಾಯಗಳಾಗಿದ್ದ ಸಿ.ವಿ.ರಾಮನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರವ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅಪ್ರಾಪ್ತನ ಕೈಗೆ ಕಾರು ಕೊಟ್ಟು ಮಗುವಿನ ಸಾವಿಗೆ ಕಾರಣವಾದ ಪೋಷಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಶ್ ಮಾಡುವ ನೆಪದಲ್ಲಿ ಡ್ರೈವಿಂಗ್ : ಕಾರನ್ನು ವಾಶ್ ಮಾಡುವ ನೆಪದಲ್ಲಿ ೧೫ ವರ್ಷದ ಬಾಲಕ ಚಾಲನೆ ಮಾಡಿಕೊಂಡು ಮನೆಯಿಂದ ಹೊರಗೆ ತಂದಿದ್ದಾನೆ. ಆತ ಮತ್ತು ಆತನ ಸ್ನೇಹಿತ ಕಾರಿನಲ್ಲಿದ್ದು, ಮುಂದೆ ಚಲಾಯಿಸಿಕೊಂಡು ಬರುತ್ತಿದ್ದಂತೆ ಕಾರು ನಿಯಂತ್ರಣ ತಪ್ಪಿದೆ. ಜನವಸತಿ ಪ್ರದೇಶವಾದ್ದರಿಂದ ಬೈಕ್ಗಳ ಮೇಲೆ ಹತ್ತಿದ ಕಾರು ನಂತರ ಕೆಲವು ಸಾರ್ವಜನಿಕರ ಕಡೆಗೂ ಹೋಗಿದೆ. ಭಯದಿಂದ ಕೆಲವರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ, ಆಟವಾಡುತ್ತಿದ್ದ ಬಾಲಕ ಆರವ್ ಮಾತ್ರ ಸಿಲುಕಿ ಸಾವನ್ನಪ್ಪಿದ್ದಾನೆ.