ಧಾರವಾಡ, (ಏಪ್ರಿಲ್ 16): ಧಾರವಾಡದ ಆರ್ನಾ ರೆಸಿಡೆನ್ಸಿಯಲ್ಲಿರುವ ಬಸವರಾಜ್ ದತ್ತನವರ್ ಎನ್ನುವರ ನಿವಾಸದಲ್ಲಿ 18 ಕೋಟಿ ರೂ. ನಗದು ಹಣ ಪತ್ತೆ ಪ್ರಕರಣ ಇದೀಗ ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆಯಾಗಿದೆ.
10 ಲಕ್ಷ ರೂ.ಗೂ ಹೆಚ್ಚು ಹಣ ಪತ್ತೆಯಾಗಿದ್ದರಿಂದ ಪ್ರಕರಣವನ್ನು ಚುನಾವಣಾಧಿಕಾರಿಗಳು, ಆದಾಯ ತೆರಿಗೆ ಇಲಾಕೆಗೆ ವರ್ಗಾಯಿಸಿದ್ದಾರೆ. ಇನ್ನು ಹಣದ ಬಗ್ಗೆ ಬಸವರಾಜ ಎನ್ನುವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ತಾವು ಯುಬಿ ಶೆಟ್ಟಿ ಅಕೌಂಟೆಂಟ್ ಎಂದು ಬಾಯ್ಬಿಟ್ಟಿದ್ದಾರೆ. ಅಲ್ಲದೇ ಬೆಂಗಳೂರು ಮೂಲದ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ದಾಖಲೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮದ್ಯ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಧಾರವಾಡದ ದಾಸನಕೊಪ್ಪ ಕ್ರಾಸ್ ಬಳಿಯ ಅರ್ನಾ ರೆಸಿಡೆನ್ಸಿಯ 3ನೇ ಮಹಡಿಯಲ್ಲಿರುವ ಬಸವರಾಜ್ ದತ್ತನವರ್ ಎನ್ನುವರ ಪ್ಲಾಟ್ ನ. 303ರ ನಿವಾಸದ ಮೇಲೆ ದಾಳಿ ಮಾಡಲಾಗಿತ್ತು. ಮನೆಗಳಲ್ಲಿದ್ದ ಎಲ್ಲಾ ಚೀಲಗಳನ್ನು ಪರಿಶೀಲನೆ ಮಾಡಿದ್ದಾರೆ. ಆದ್ರೆ, ಚೀಲಗಳಲ್ಲಿ ಏನೂ ಸಿಗದಿದ್ದಾಗ ಕೊನೆಗೆ ತಿಜೋರಿ ಓಪನ್ ಮಾಡಿದ್ದಾರೆ. ಆಗ ತಿಜೋರಿಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದ್ದಾರೆ.
ಇದೀಗ ಈ ಪ್ರಕರಣವನ್ನು ಪೊಲೀಸರು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಿದ್ದು, ಸದ್ಯ ಐಟಿ ಅಧಿಕಾರಿಗಳು ಬಸವರಾಜ್ ದತ್ತನವರ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.