ಬೆಂಗಳೂರು: ವಿಚ್ಛೇದಿತ ಪತಿ ಅಂಕವೈಕಲ್ಯದಿ0ದ ಬಳಲುತ್ತಿದ್ದರೆ ಜೀವನಾಂಶ ನೀಡಬೇಕು ಎಂಬ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿಗೆ ಜೀವನಾಂಶ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯನ ನೀಡಿದ್ದ ಆದೇಶವನ್ನು ರದ್ದುಗೊಳಿಸಬೇಕು ಎಂದು ಅಂಗವಿಕಲ ಪತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಶೇ.೭೫ ರಷ್ಟು ಅಂಗವೈಕಲ್ಯ ಇರುವ ವ್ಯಕ್ತಿ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅರ್ಜಿದಾರ ಊರುಗೋಲಿನ ಸಹಾಯದಿಂದ ನಡೆಯುತ್ತಾನೆ. ಆತ ಇನ್ನು ಮುಂದೆ ಉದ್ಯೋಗ ಮಾಡಲು ಅಸಹಾಯಕ. ಹಾಗಾಗಿ ಆತನಿಗೆ ಜೀವನಾಂಶ ನೀಡುವಂತೆ ನಿರ್ದೇಶನ ನೀಡಲಾಗುವುದಿಲ್ಲ. ಪತಿಯ ಅಂಗವೈಕಲ್ಯ ಪ್ರಮಾಣಪತ್ರ ಪರಿಶೀಲಿಸಿದರೆ ಪತಿ ಸಂಪಾದಿಸಲು ಅಸಮರ್ಥನಾಗಿದ್ದಾರೆ. ಪತ್ನಿ ಸಂಪಾದನೆ ಮಾಡುವುದಕ್ಕೆ ಅರ್ಹರಾಗಿದ್ದಾರೆ. ಹೀಗಿದ್ದರೂ ಜೀವನಾಂಶ ಪಾವತಿಸಲು ಹೆಂಡತಿ ಏಕೆ ಮತ್ತು ಹೇಗೆ ಒತ್ತಾಯಿಸುತ್ತಾರೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
ಅರ್ಜಿದಾರರು ಪತಿ ಮತ್ತು ಪ್ರತಿವಾದಿಯ ವೈವಾಹಿಕ ಸಂಬ0ಧ ಹದಗೆಟ್ಟ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದರು. ಪತ್ನಿಯು ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದರು. ಈ ಕುರಿತು ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ, ಪತ್ನಿಗೆ ಪ್ರತಿ ತಿಂಗಳು ೧೫,೦೦೦ ರೂ ಮಧ್ಯಂತರ ಜೀವನಾಂಶ ನೀಡಲು ಆದೇಶಿಸಿತ್ತು. ಈ ಆದೇಶದ ಅನುಸಾರ ೨೦೧೨ ಡಿ.೩೦ ರಂದು ಪತ್ನಿ ನಂತರ ಜುಲೈ ೨೦೧೩ ರಲ್ಲಿ ಸಂಬAಧಪಟ್ಟ ನ್ಯಾಯಾಲಯದ ಮುಂದೆ ಪತಿಯಿಂದ ಜೀವನಾಂಶ ದೊರೆತ ಕುರಿತಾಗಿ ಎಲ್ಲ ಲೆಕ್ಕಾಚಾರವನ್ನು ಸಹಿತ ಮೆಮೊ ಸಲ್ಲಿಸಿದ್ದು, ಆ ಪ್ರಕಾರವಾಗಿ ಪತಿಯಿಂದ ಜೀವನಾಂಶ ಪಾವತಿಸಲು ಬಾಕಿ ಇದೆ ಎಂದು ಹೇಳಲಾಗಿತ್ತು.
ಈ ಮೆಮೊವನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ಬಾಕಿಯಿರುವಾಗಲೇ ಪತಿಯೂ ಪಾರ್ಶ್ವವಾಯುವಿಗೆ ಒಳಗಾದ ಪರಿಣಾಮವಾಗಿ ಶೇ.೭೫ ಅಂಗವೈಕಲ್ಯಕ್ಕೆ ಒಳಗಾಗಿದ್ದರು, ಇದರಿಂದ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಪತಿ ಜೀವನಾಂಶ ಪಾವತಿಸದ ಕಾರಣ, ಜೀವನಾಂಶದ ಬಾಕಿ ವಸೂಲಿ ಮಾಡಲು, ಜೀವನಾಂಶದ ಆದೇಶವನ್ನು ಕಾರ್ಯಗತಗೊಳಿಸುವಂತೆ ಕೋರಿ ಪತ್ನಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಪೀಠ ಪತಿಯಾದವರು ಹೆಂಡತಿ, ಮಗು ನೋಡಿಕೊಳ್ಳಲು ಜವಾಬ್ದಾರರಾಗಿರುತ್ತಾರೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಪತಿಯ ಆರೋಗ್ಯ ಸ್ಥಿತಿ ಸರಿ ಇಲ್ಲದಿರುವುದರಿಂದ ಮುಂದೆ ಉದ್ಯೋಗ ಮಾಡಲು ಮತ್ತು ಹೆಂಡತಿ, ಮಗುವಿಗೆ ಜೀವನಾಂಶ ಪಾವತಿಸಲು ಶಕ್ತನಾಗಿಲ್ಲ. ೨೦೧೩ರ ಡಿಸೆಂಬರ್ನಲ್ಲಿ ಪತಿ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ. ಅಲ್ಲಿಂದ ಜೀವನಾಂಶ ಪಾವತಿ ಬಾಕಿ ಉಳಿದಿದ್ದು, ಈ ಅಂಶವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕಿತ್ತು. ಜೊತೆಗೆ ಪತಿಯಿಂದ ಭರಿಸಬೇಕಾದ ಜೀವನಾಂಶ ೧೯,೦೪,೦೦೦ ರೂ.ಗಳಿದ್ದು ನಿರ್ವಹಣೆಯ ಅವಧಿಯು ಗಂಡನ ಅಂಗವೈಕಲ್ಯದ ಅವಧಿಯನ್ನು ಒಳಗೊಳ್ಳುತ್ತದೆ. ವಿಚಾರಣಾ ನ್ಯಾಯಾಲಯ ಎಲ್ಲ ಮೊತ್ತ ಪಾವತಿಸಲು ನಿರ್ದೇಶಿಸಿದರೆ, ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಲಿದೆ ಎಂದು ಪೀಠ ಹೇಳಿದೆ.