–ಮೋದಿ ಪ್ರಭಾವ ಕುಗ್ಗಿಸಲು ಯತ್ನ: ನಡೆಯದು ಇವರ ಆಟ
-ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪ
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಚೀನಾ ಹವಣಿಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ಸಹ ಕೈ ಜೋಡಿಸಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ನವಲಗುಂದ ವಿಧಾನಸಭಾ ಕ್ಷೇತ್ರದ ಶಲವಡಿ ಗ್ರಾಮದಲ್ಲಿ ಇಂದು ರಾತ್ರಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾದರೆ ಭಾರತವನ್ನು ಆರ್ಥಿಕ ಮುಂಚೂಣಿಗೆ ತರುವ ಜತೆಗೆ ವಿಶ್ವ ನಾಯಕರಾಗಿ ಬಿಡುತ್ತಾರೆ ಎಂಬ ತಳಮಳ ಚೀನಾ, ಪಾಕ್ ಸೇರಿದಂತೆ ಬಹು ರಾಷ್ಟ್ರಗಳನ್ನು ಕಾಡುತ್ತಿದೆ ಎಂದು ಹೇಳಿದರು.
ಈ ಬಾರಿ ಮೋದಿ ಅವರನ್ನು ಸೋಲಿಸಲು ಚೀನಾ ಎಲ್ಲ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಚೀನಾದೊಂದಿಗೆ ಕಾಂಗ್ರೆಸ್ ಸಹ ಕೈ ಜೋಡಿಸಿದೆ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದರು. ಮೋದಿ ಪ್ರಭಾವ ಕುಗ್ಗಿಸಲು ಕಾಂಗ್ರೆಸ್ ನಮ್ಮ ಶತ್ರು ರಾಷ್ಟ್ರಗಳೊಂದಿಗೆ ಸೇರಿ ಸಂಚು ಮಾಡುತ್ತಿದೆ. ಆದರೆ, ಮೋದಿ ಅವರಿಗೆ ಅಸಂಖ್ಯಾತ ಭಾರತೀಯರ ಬೆಂಬಲ, ಆಶೀರ್ವಾದವಿದೆ. ಹಾಗಾಗಿ ಇದೆಲ್ಲಾ ಫಲಿಸದು ಎಂದು ಪ್ರಹ್ಲಾದ ಜೋಶಿ ಹೇಳಿದರು.
ಕಮಿಷನ್ ಆಸೆಗೆ ಬಿದ್ದ ಕಾಂಗ್ರೆಸ್: ಕಮಿಷನ್ ಆಸೆಗೆ ಬಿದ್ದು ಕೋವಿಡ್ ಲಸಿಕೆ ವಿದೇಶದಿಂದ ತರಿಸಿರೆಂದು ಕಾಂಗ್ರೆಸ್ ನವರು ಬೊಬ್ಬೆ ಹೊಡೆದರು. ಆದರೆ, ಮೋದಿ ಅವರು ದೇಶೀ ಲಸಿಕೆಯನ್ನೇ ಉತ್ಪಾದಿಸಿ ಭಾರತೀಯರ ಜೀವ ಉಳಿಸಿದರು. ದೇಶದ ಆರ್ಥಿಕತೆ ಬದಿಗಿಟ್ಟು 60 ದೇಶಗಳಿಗೂ ಲಸಿಕೆ ರವಾನಿಸಿ ಸುಜೀವಿನಿ ಯಾದರೆಂದು ಜೋಶಿ ಬಣ್ಣಿಸಿದರು. ಅಮೇರಿಕಾದಲ್ಲಿ ಲಸಿಕೆ ಹಾಕುವ ದಿನದಂದೇ ಭಾರತೀಯ ಲಸಿಕೆ ನಮ್ಮ ಜನರಿಗೆ ಕೊಡಬೇಕು ಎಂದು ವಿಜ್ಞಾನಿಗಳಿಗೆ ಹೇಳಿ ಲಸಿಕೆ ತಯಾರಿಸಿ ವಿಶ್ವದ ಹಿರಿಯಣ್ಣನಿಗೂ ಪ್ರಧಾನಿ ಮೋದಿ ಸೆಡ್ಡು ಹೊಡೆದರು ಎಂದು ಸಚಿವ ಜೋಶಿ ಸ್ಮರಿಸಿದರು.
ಕಾಂಗ್ರೆಸ್ ನವರಿಗೆ ಮಕ್ಕಳಾಗಿವೆ ಅಲ್ಲವೇ: ದೇಶೀ ಕೋವಿಡ್ ಲಸಿಕೆ ಯಶಸ್ವಿಯಾದ ಮೇಲೆ ಈ ಲಸಿಕೆ ಪಡೆದವರಿಗೆ ಮಕ್ಕಳಾಗಲ್ಲ ಎಂದರು ಕಾಂಗ್ರೆಸ್ಸಿಗರು. ಅವರೂ ಲಸಿಕೆ ಪಡೆದಿದ್ದಾರೆ. ಮಕ್ಕಳಾಗಿವೆ ಅಲ್ಲವೇ? ಎಂದು ಸಚಿವ ಜೋಶಿ ಪ್ರಶ್ನಿಸಿದರು. ಪಾಪರ್ ಆಗಿದೆ ಕಾಂಗ್ರೆಸ್ ಸರ್ಕಾರ: ಗ್ಯಾರೆಂಟಿ ಘೋಷಣೆ ಮಾಡಿದ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ. ಉಚಿತ ವಿದ್ಯುತ್ ಕೊಟ್ಟು ವಿದ್ಯುತ್ ಕಂಪನಿಗಳಿಗೆ ತುಂಬಲು ಹಣವಿಲ್ಲದೆ ಕರೆಂಟ್ ಬಂದ್ ಮಾಡಿ ಎನ್ನುತ್ತಿದೆ ಎಂದು ಜೋಶಿ ಹೇಳಿದರು.
18 ಸಾವಿರ ಹಳ್ಳಿಗಳು ಕತ್ತಲಲ್ಲಿ ಇದ್ದವು: ಮೋದಿ ಪ್ರಧಾನಿ ಆದಾಗ 18100 ಹಳ್ಳಿಗಳು ವಿದ್ಯುತ್ ಕಾಣದೆ ಕತ್ತಲಲ್ಲಿ ಇದ್ದವು. ಒಮ್ಮೆ ನನ್ನ ಕರೆದು ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಿ ವಿದ್ಯುತ್ ಉತ್ಪಾದನೆ ದ್ವಿಗುಣಗೊಳಿಸು. ಆ ಎಲ್ಲಾ ಹಳ್ಳಿಗಳಿಗೂ ಬೆಳಕು ನೀಡೋಣ ಎಂದರು. ಅದರಂತೆ ನಡೆದುಕೊಂಡಿದ್ದೇವೆ. ಅಷ್ಟೂ ಹಳ್ಳಿಗಳಿಗೆ ಕರೆಂಟ್ ಕೊಟ್ಟಿದ್ದೇವೆ ಎಂದು ಜೋಶಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಮರ್ಥಿಸಿಕೊಂಡರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನ ಹಲವಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ನರಗುಂದ ಶಾಸಕ ಸಿ.ಸಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಂಡಲಾಧ್ಯಕ್ಷ ದಾನಪ್ಪಗೌಡರ, ಮಾಜಿ ಸಚಿವ ಕೆ.ಎನ್.ಗಡ್ಡಿ, ಷಣ್ಮುಖ ಗುರಿಕಾರ, ಜೆಡಿಎಸ್ ಮುಖಂಡರಾದ ಗಂಗಾಧರಮಠ, ಶಲವಡಿ, ವಿ.ಸಿ. ಪಾಟೀಲ, ಪ್ರಕಾಶ ಅಂಗಡಿ, ಸುರೇಶ ಬಣವಿ, ಸಿದ್ದಣ್ಣ ಕಿಟಗೇರಿ, ಸಿದ್ದನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಫಕೀರಪ್ಪ ಜಕ್ಕಣ್ಣವರ, ಸುರೇಶ ಗಾಣಿಗೇರ, ದೇವರಾಜ ದಾಡಿಬಾವಿ ಅನೇಕರಿದ್ದರು.