ಬೆಂಗಳೂರು : ಕರ್ನಾಟಕದ ವಿದ್ಯುನ್ಮಾನ ಮಾಧ್ಯಮದ ಮೊಟ್ಟ ಮೊದಲ ಜ್ಯೋತಿಷಿ ಎಂದು ಹೆಸರು ಗಳಿಸಿದ್ದ ಖ್ಯಾತ ಜ್ಯೋತಿಷಿ ಎಸ್.ಕೆ ಜೈನ್ (67) ಅವರು ವಿಧಿವಶರಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಎಸ್.ಕೆ ಜೈನ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು (ಏಪ್ರಿಲ್ 12) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸೆರೆಳೆದಿದ್ದು, ಪತ್ನಿ , ಓರ್ವ ಪುತ್ರಿಯನ್ನ, ಬಂದುಬಳಗವನ್ನ ಅಗಲಿದ್ದಾರೆ. 1957, ಅಕ್ಟೋಬರ್ 13ರಂದು ಜನಿಸಿದ್ದ ಎಸ್.ಕೆ ಜೈನ್, ಮೂಲತಃ ದಕ್ಷಿಣ ಕನ್ನಡದವರಾಗಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ.
ಇವರ ತಂದೆ ಬಿ.ಜಿ ಶಶಿಕಾಂತ್ ಜೈನ್ ಹೆಸರಾಂತ ಜ್ಯೋತಿಷಿಗಳಾಗಿದ್ದವರು. ಜ್ಯೋತಿರ್ವಿದ್ಯೆಯಲ್ಲಿ ಇಡೀ ದೇಶದಲ್ಲಿ ಹೆಸರು ಮಾಡಿದ್ದ ದಿವಂಗತ ಬಿ.ಜಿ ಶಶಿಕಾಂತ್ ಜೈನ್ ರ ಪುತ್ರ ಎಸ್.ಕೆ ಜೈನ್ ಮೊದಲಿಗೆ ಇಂಜಿನಿಯರ್ ಆಗಬೇಕೆಂದುಕೊಂಡವರು. ಆದರೆ ಅದನ್ನ ಕೈಬಿಟ್ಟು ತಂದೆಯ ಬಳಿಯಲ್ಲಿ ಜ್ಯೋತಿಷ್ಯವನ್ನ ಕಲಿಯಲು ನಿಂತರು. ಬಳಿಕ ದೇಶ ವಿದೇಶಗಳಲ್ಲಿ ಹೆಸರು ಮಾಡಿದರು.
ಉದಯ ಟಿವಿಯಲ್ಲಿ ಜ್ಯೋತಿಷ್ಯ ಕಾರ್ಯಕ್ರಮವನ್ನ ನಡೆಸಿಕೊಡುವುದರ ಮೂಲಕ ಕನ್ನಡ ವಿದ್ಯುನ್ಮಾನ ಮಾಧ್ಯಮದ ಮೊಟ್ಟಮೊದಲ ಜ್ಯೋತಿಷಿ ಎಂಬ ಹೆಸರಿನೊಂದಿಗೆ ಖ್ಯಾತಿಯನ್ನ ಹೊಂದಿದ್ದರು. ಹಲವಾರು ವರ್ಷಗಳಿಂದ ಇತರೆ ವಾಹಿನಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮವನ್ನ ನಡೆಸಿಕೊಡುತ್ತಿದ್ದರು.
ಹಬ್ಬ-ಹರಿದಿನ, ಗ್ರಹಣ ಸೇರಿದಂತೆ ವಿಶೇಷ ದಿನಗಳಂದು ವಾಹಿನಿಗಳಲ್ಲಿ ರಾಶಿ ಫಲಾಫಲ ಸೇರಿದಂತೆ ದಿನದ ವಿಶೇಷತೆಗಳ ಬಗ್ಗೆ ಎಸ್.ಕೆ ಜೈನ್ ಅವರು ಜ್ಯೋತಿಷ್ಯ ಹೇಳುತ್ತಿದ್ದರು.