ಕ್ರೀಡೆ ಸುದ್ದಿ

ಎಷ್ಟೇ ಮಳೆಯಾದ್ರೂ ಇಂದು ಆರ್.ಸಿ.ಬಿ-ಸಿ.ಎಸ್.ಕೆ ಪಂದ್ಯ ನಡೆಯುತ್ತೆ!

Share It

ಬೆಂಗಳೂರು: 2024ರ ಐಪಿಎಲ್ ಕ್ರಿಕೆಟ್ ಟೂರ್ನಿಯ 68ನೇ ಪಂದ್ಯದಲ್ಲಿ, ಇಂದು ಆರ್.ಸಿ.ಬಿ ತಂಡವು, ಸಿ.ಎಸ್.ಕೆ ತಂಡವನ್ನು ಎದುರಿಸಲಿದೆ. ಈ ಪಂದ್ಯ ಆರ್‌ಸಿಬಿಯ ತವರು ಮೈದಾನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ .

ಪ್ಲೇ-ಆಫ್​ಗೇರಲು ಉಭಯ ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈಗಾಗಲೇ 3 ತಂಡಗಳು ಪ್ಲೇ- ಆಫ್‌ಗೆ ಅರ್ಹತೆ ಪಡೆದಿವೆ. ಉಳಿದಿರುವ ಏಕೈಕ ಸ್ಥಾನಕ್ಕಾಗಿ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ಹಣಾಹಣಿ ಏರ್ಪಟ್ಟಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೋ ಆ ತಂಡ ಪ್ಲೇ- ಆಫ್​ಗೇರಲಿದೆ.

ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್​ಕೆ ಪ್ಲೇ-ಆಫ್​ಗೇರಲಿದ್ದು, ಆರ್​ಸಿಬಿ ಲೀಗ್​​ನಿಂದ ಹೊರಬೀಳಲಿದೆ. ಇದು ಆರ್​.ಸಿ.ಬಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಎಷ್ಟೇ ಮಳೆಬಂದರೂ ಪಂದ್ಯವನ್ನು ಕೇವಲ 15 ನಿಮಿಷಗಳಲ್ಲಿ ಆರಂಭಿಸುವ ತಂತ್ರಜ್ಞಾನವನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಳವಡಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಒಳಚರಂಡಿ ವ್ಯವಸ್ಥೆ: ಹವಾಮಾನ ಇಲಾಖೆ ವರದಿ ಪ್ರಕಾರ ಇಂದು ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುವ ಸೂಚನೆ ಸಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಇದರಿಂದ ಆರ್‌ಸಿಬಿಯ ಪ್ಲೇ-ಆಫ್‌ ಕನಸು ಭಗ್ನವಾಗಲಿದೆ.

ಆದರೆ, ಪಂದ್ಯದ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಮಳೆ ಬಂದು ಸ್ವಲ್ಪ ಸಮಯದ ನಂತರ ನಿಂತರೆ, ಓವರ್‌ಗಳನ್ನು ಕಡಿತಗೊಳಿಸಿ ಪಂದ್ಯವನ್ನು ಮರು ಆರಂಭಿಸಲಾಗುತ್ತದೆ. ಅದಾಗ್ಯೂ ಈ ಹಿಂದೆ ನಡೆದ ಕೆಲವು ಪಂದ್ಯಗಳು ಸಂಪೂರ್ಣ ಮಳೆಗಾಹುತಿಯಾದರೆ, ಇನ್ನು ಕೆಲವು ಪಂದ್ಯಗಳು ಪಿಚ್ ಹಾಗೂ ಮೈದಾನ ಹೆಚ್ಚು ಒದ್ದೆಯಾದ ಕಾರಣ ಸ್ಥಗಿತಗೊಂಡಿದ್ದವು.

ಆದರೆ ಈ ರೀತಿಯಾಗಿ ಪಂದ್ಯ ರದ್ದಾಗುವ ಸಾಧ್ಯತೆಗಳು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವುದಿಲ್ಲ. ಏಕೆಂದರೆ ಈ ಮೈದಾನದಲ್ಲಿ ಎಷ್ಟೇ ಮಳೆ ಬಂದರೂ ಪಂದ್ಯವನ್ನು ಕೆಲವೇ ನಿಮಿಷಗಳಲ್ಲಿ ಆರಂಭಿಸುವ ಅತ್ಯಾಧುನಿಕ ತಂತ್ರಜ್ಞಾನವಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ಮಳೆಯ ಆತಂಕದ ನಡುವೆ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಒಳಚರಂಡಿ ವ್ಯವಸ್ಥೆ ವಿಶ್ವದಲ್ಲೇ ಎಷ್ಟು ಅತ್ಯುತ್ತಮವಾಗಿದೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇಲ್ಲಿ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ನೆಲ ಒಣಗುತ್ತದೆ. ಅಲ್ಲದೆ, ಮೈದಾನದಲ್ಲಿ ಸಂಗ್ರಹವಾದ ನೀರು ಕೂಡ ಬಹಳ ಬೇಗನೆ ಮೈದಾನದಲ್ಲಿ ಇಂಗಿ ಹೋಗುತ್ತದೆ.

15 ನಿಮಿಷಗಳಲ್ಲಿ ಪಿಚ್ ಸಿದ್ದ: ಚಿನ್ನಸ್ವಾಮಿ ಕ್ರೀಡಾಂಗಣವು ಉತ್ತಮ ಗುಣಮಟ್ಟದ ಒಳಚರಂಡಿ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಸಬ್‌ಏರ್ ವ್ಯವಸ್ಥೆಯಿಂದಾಗಿ ಮಳೆ ನಿಂತ ಕೇವಲ 15 ನಿಮಿಷಗಳಲ್ಲಿ ಪಂದ್ಯ ಆರಂಭಿಸಬಹುದಾಗಿದೆ. ಎಷ್ಟೇ ಭಾರೀ ಮಳೆಯಾದರೂ ಆಟಕ್ಕೆ ಮೈದಾನವನ್ನು ಸಿದ್ಧಗೊಳಿಸಬಹುದು. ನಿರ್ವಾತ ಚಾಲಿತ ಒಳಚರಂಡಿ ವ್ಯವಸ್ಥೆ ಪ್ರತಿ ನಿಮಿಷಕ್ಕೆ 10,000 ಲೀಟರ್ ನೀರನ್ನು ಪಿಚ್​ನಿಂದ ಹೊರಹಾಕುತ್ತದೆ. ಕಳೆದ ಐಪಿಎಲ್​ನಲ್ಲಿ ಆರ್​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಭಾರಿ ಮಳೆಯ ನಡುವೆಯೂ ಸಂಪೂರ್ಣ ಪಂದ್ಯವನ್ನು ನಡೆಸಲಾಗಿತ್ತು. ಆದ್ದರಿಂದ ಇಂದು ರಾತ್ರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಅಂತಿಮ ಐಪಿಎಲ್ ಲೀಗ್ ನಡೆಯುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಬಹುದು.


Share It

You cannot copy content of this page