ಅಪರಾಧ ರಾಜಕೀಯ ಸುದ್ದಿ

ಎಸ್ಐಟಿ ಎಂದರೆ ಸಿದ್ದರಾಮಯ್ಯ-ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಂ: ಎಚ್.ಡಿ.ಕೆ ವಾಗ್ದಾಳಿ

Share It

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ. ಅವರಿಗೆ ಕೇವಲ ಪ್ರಚಾರ, ಚುನಾವಣೆ ವಿಷಯವನ್ನಾಗಿಸಿ ಗೆಲುವು ಸಾಧಿಸುವುದು ಅಷ್ಟೇ ಬೇಕಿರುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ-ಮಾಜಿ ಸಿಎಂ‌ ಹೆಚ್​.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಟಿ ಎಂಬುದು ಈಗ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಮತ್ತು ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಆಗಿದೆ. ನಿಜವಾಗಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವ ಉದ್ದೇಶ ಅವರದ್ದಾಗಿದ್ದರೆ ವಿಡಿಯೋ ಹರಿಯಬಿಟ್ಟವರನ್ನು ಯಾಕೆ ಇನ್ನೂ ಬಂಧಿಸಿಲ್ಲ? ಆ ವಿಚಾರವಾಗಿ ದೂರು ನೀಡಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

‘ರಾಹುಲ್ ಗಾಂಧಿಯನ್ನು ಯಾಕೆ ವಿಚಾರಣೆಗೆ ಒಳಪಡಿಸಿಲ್ಲ’: ಪ್ರಜ್ವಲ್ ಪ್ರಕರಣದಲ್ಲಿ 16 ವರ್ಷ ವಯಸ್ಸಿನ ಬಾಲಕಿಯೂ ಸಂತ್ರಸ್ತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ. ಯಾವ ಆಧಾರದ ಮೇಲೆ ರಾಹುಲ್​ ಗಾಂಧಿ ಆ ಹೇಳಿಕೆ ನೀಡಿದರು? ಆ ಬಗ್ಗೆ ಎಸ್ಐಟಿ ಯಾಕೆ ಇನ್ನೂ ತನಿಖೆ ಮಾಡಿಲ್ಲ? 400 ಮಹಿಳೆಯರನ್ನು ಅತ್ಯಾಚಾರ ಮಾಡಲಾಗಿದೆ ಎನ್ನುತ್ತಾರೆ. ಹಾಗಾದರೆ ಯಾಕೆ ರಾಹುಲ್​ ಗಾಂಧಿಯವರನ್ನು ಇನ್ನು ಬಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

2,900 ಕೇಸ್ ಇದೆ​ ಎಂದು ಹೇಳುತ್ತಾರೆ. ಆದರೂ ಒದ್ದಾಡುತ್ತಾರೆ. ಯಾವ ಸಂತ್ರಸ್ತೆಯರೂ ಸಿಗುತ್ತಿಲ್ಲ ಎಂದು ಒದ್ದಾಡುತ್ತಿದ್ದಾರೆ. ಆ ಸಂತ್ರಸ್ತೆಯರಿಗೆ ಏನು ಸ್ಥೈರ್ಯ ತುಂಬುತ್ತೀರಿ ನೀವು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನಾನು ಪ್ರಜ್ವಲ್​ ರೇವಣ್ಣರನ್ನ ವಹಿಸಿಕೊಂಡು ಮಾತನಾಡುತ್ತಿಲ್ಲ. ಒಂದು ತನಿಖೆ ಪ್ರಾರಂಭ ಮಾಡಿದಾಗ ಮಾಹಿತಿ ಸೋರಿಕೆ ಆಗಬಾರದು. ಸರ್ಕಾರಕ್ಕೆ, ಸಂತ್ರಸ್ತೆಯರಿಗೆ ರಕ್ಷಣೆ ಕೊಡುವುದು ಬೇಕಾಗಿಲ್ಲ. ಈ ಸರ್ಕಾರಕ್ಕೆ ಬೇಕಾಗಿರುವುದು ಕೇವಲ ಪ್ರಚಾರ ಅಷ್ಟೇ. ಏಪ್ರಿಲ್ 22ರಂದು ಬೇಲೂರಿನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಿತು.

ಏಪ್ರಿಲ್ 22ರಂದು ಪ್ರಜ್ವಲ್​ ಪಕ್ಕದಲ್ಲಿ ಕುಳಿತ ಹೆಣ್ಣುಮಗಳು ಯಾರು? ಏ.21ರಂದು ಬಿಡುಗಡೆಯಾದ ವಿಡಿಯೋದಲ್ಲಿರುವುದು ಯಾರು? ಅತ್ಯಾಚಾರ ಆಗಿದ್ರೆ ಆ ಹೆಣ್ಮಗಳು ಯಾಕೆ ಒಂದೇ ವೇದಿಕೆಯಲ್ಲಿ ಇರುತ್ತಿದ್ದರು?ಪ್ರಜ್ವಲ್​ ಪಕ್ಕ ಆ ಹೆಣ್ಣುಮಗಳು ಯಾಕೆ ಕುಳಿತುಕೊಳ್ಳುತ್ತಿದ್ದರು? ಎಂದು ಪ್ರಶ್ನಿಸಿದರು.

ಡಿಸಿಎಂ ಡಿ.ಕೆ ಶಿವಕುಮಾರ್ ಹಸ್ತಕ್ಷೇಪದಲ್ಲಿ ನಡೆಯುವ ತನಿಖೆಯಿಂದ ವಾಸ್ತವ ಹೊರಬರುವುದಿಲ್ಲ. ಅಂಥ ವ್ಯಕ್ತಿಯನ್ನು ಸಂಪುಟದಲ್ಲಿ ಇಟ್ಟುಕೊಂಡು ತನಿಖೆ ಮಾಡಿದರೆ ಸೂಕ್ತ ರೀತಿಯಲ್ಲಿ ತನಿಖೆ ಸಾಗದು. ಹೀಗಾಗಿ ಅವರನ್ನು ಸಂಪುಟದಿಂದ ವಜಾಗೊಳಿಸಿ ತನಿಖೆ ಮುಂದುವರಿಸಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಪ್ರಜ್ವಲ್​​ ಪ್ರಕರಣದ ಪಾರದರ್ಶಕ ತನಿಖೆಯಾಗಬೇಕಿದೆ. ಎಸ್ಐಟಿಯಿಂದ ನ್ಯಾಯಯುತವಾದ ತನಿಖೆ ಸಾಗದು. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕುಮಾರಸ್ವಾಮಿ ಕೈ ಸರ್ಕಾರವನ್ನು ಒತ್ತಾಯಿಸಿದರು.


Share It

You cannot copy content of this page