ಉಗ್ರ ನೆಲೆಗಳ ಮೇಲಿನ ಏರ್ ಸ್ಟ್ರೈಕ್ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ರಿಯಾಕ್ಷನ್
ಬೆಂಗಳೂರು: ಪುಲ್ವಾಮ ಘಟನೆ ನಡೆದಾಗಲೇ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ರೆ, ಪಾಕಿಸ್ತಾನ ಬಾಲ ಬಿಚ್ಚುತ್ತಿರಲಿಲ್ಲ. ಆದರೂ, ಈಗ ಉಗ್ರರ ನೆಲೆಗಳ ಮೇಲಿನ ದಾಳಿಗೆ ನಮ್ಮ ಸೇನೆಗೆ ಅಭಿನಂದಿಸುತ್ತೇವೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ನಮ್ಮ ಸೇನಾ ಬಲದ ಮೇಲೆ ನಮಗೆ ನಂಬಿಕೆಯಿದೆ. ಹಿಂದಿನ ಎಲ್ಲ ಯುದ್ಧದ ಸಂದರ್ಭದಲ್ಲಿ ನಮ್ಮ ಸೇನೆಯ ಶಕ್ತಿಯೇನು ಎಂಬುದು ವಿಶ್ವಕ್ಕೆ ಗೊತ್ತಿದೆ. ಇದೀಗ ಏರ್ ಸ್ಟ್ರೈಕ್ ಮೂಲಕ ನಮ್ಮ ಶಕ್ತಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಗೊತ್ತಾಗಿದೆ. ನಮ್ಮ ಇಡೀ ದೇಶ ನಮ್ಮ ಸೈನ್ಯದೊಂದಿಗೆ ನಿಲ್ಲಲಿದೆ. ನಮ್ಮ ಪಕ್ಷವೂ ಕೂಡ ಸೇನೆಯ ಪರಾಕ್ರಮಕ್ಕೆ ಅಭಿನಂದಿಸುತ್ತದೆ ಎಂದರು.
ಹಿಂದೆ ಪುಲ್ವಾಮ ಘಟನೆ ನಡೆದು 40 ಜನ ಸೈನಿಕರು ಹುತಾತ್ಮರಾದರು. ಆಗ ಇಂತಹ ಪ್ರತೀಕಾರ ನಡೆಯಬೇಕಿತ್ತು. ಪಾಕಿಸ್ತಾನಕ್ಕೆ ಅದೊಂದು ಪಾಠವಾಗುತ್ತಿತ್ತು. ಅನಂತರ ಪಹಲ್ಗಾಮ್ ದಾಳಿಯಲ್ಲಿ ಪ್ರವಾಸಿಗರು ಸಾವನ್ನಪ್ಪುವ ಪ್ರಮೇಯ ಬರುತ್ತಿರಲಿಲ್ಲ. ಆದರೂ ನಮ್ಮ ಸೇನೆಯ ಕಾರ್ಯಾಚರಣೆಗೆ ಇಡೀ ದೇಶ ಬೆಂಬಲ ನೀಡಲಿದೆ ಎಂದರು.